ಮಡಿಕೇರಿ: ಮಳೆಗಾಲದಲ್ಲಿ ಕಾಳುಮೆಣಸು, ಅಡಕೆ ಮುಂತಾದ ಬೆಳೆಗಳಿಗೆ ತಗಲುವ ಶಿಲೀಂಧ್ರ ರೋಗಗಳನ್ನು ಮುಂಜಾಗ್ರತೆಯಾಗಿ ತಡೆಗಟ್ಟಲು ಬೋರ್ಡೊ ದ್ರಾವಣವನ್ನು ಸಿಂಪಡಿಸುವ ಬಗ್ಗೆ ಪೊನ್ನಂಪೇಟೆ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷ ಣಾ ತಜ್ಞ ಡಾ. ವೀರೇಂದ್ರ ಕುಮಾರ್ ಸಲಹೆ ನೀಡಿದ್ದಾರೆ.
ಬೋರ್ಡೊ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂಧ್ರನಾಶಕ. ಆದರೆ, ಇದನ್ನು ವೈಜ್ಞಾನಿಕವಾಗಿ ತಯಾರಿಸುವ ವಿಧಾನದಲ್ಲಿ ತಪ್ಪುಗಳಾದರೆ ರಸಸಾರದಲ್ಲಾಗುವ ವ್ಯತ್ಯಾಸದಿಂದ ಸಸ್ಯರೋಗಗಳು ಸಮರ್ಪಕವಾಗಿ ನಿರ್ವಹಣೆಯಾಗುವುದಿಲ್ಲ. ಅಲ್ಲದೇ, ತಟಸ್ಥ ರಸಸಾರವಿಲ್ಲದ ದ್ರಾವಣವನ್ನು ಬೆಳೆಗಳ ಮೇಲೆ ಸಿಂಪರಣೆ ಮಾಡಿದಲ್ಲಿ ಎಲೆಗಳು ಸುಟ್ಟು ದುಷ್ಪರಿಣಾಮವಾಗುವುದು. ಆದ್ದದರಿಂದ ವೈಜ್ಞಾನಿಕ ಪದ್ಧತಿಯಲ್ಲಿ ಬೋರ್ಡೊ ದ್ರಾವಣವನ್ನು ತಯಾರಿಸಿ ಸಿಂಪರಣೆ ಕೈಗೂಳ್ಳುವುದು ಪ್ರಸ್ತುತದಲ್ಲಿ ಅವಶ್ಯಕ ಎಂದು ಹೇಳಿದ್ದಾರೆ.
ಕೆಲವು ಪ್ರದೇಶಗಳಲ್ಲಿ ಕೃಷಿಕರು ಮೈಲುತುತ್ತ್ತ, ಸುಣ್ಣ ಮತ್ತು ನೀರನ್ನು ಲೆಕ್ಕಾಚಾರದಲ್ಲಿ ಬೆರಸದೆ, ದ್ರಾವಣದ ರಸಸಾರವನ್ನು (ಪಿ.ಎಚ್) ಪರೀಕ್ಷಿಸದೆ ಸಿಂಪರಣೆ ಮಾಡಿ ರೋಗದ ಹತೋಟಿಯಲ್ಲಿ ಯಶಸ್ಸು ಕಾಣದೆ ಆರ್ಥಿಕ ನಷ್ಟವನ್ನು ಅನುಭವಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.
ಮೈಲುತುತ್ತ ಅಂದರೆ ಶುದ್ಧ ತಾಮ್ರವನ್ನು ಗಂಧಕಾಮ್ಲದಲ್ಲಿ ಉಪಚರಿಸಿ ಅದನ್ನು ಹರಳು ರೂಪಕ್ಕೆ ತರಲಾದ ಉತ್ಪನ್ನ. ತಾಮ್ರವು ಶಿಲೀಂಧ್ರಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ. ಘನ ಲೋಹವಾಗಿ ಕರಗದೆ ಇರುವ ಕಾರಣ ಅದನ್ನು ನೇರವಾಗಿ ಬಳಕೆ ಮಾಡಲಿಕ್ಕೆ ಬರುವುದಿಲ್ಲ. ಅದಕ್ಕಾಗಿ ಅದನ್ನು ಸಲ್ಫೇಟ್ ರೂಪಕ್ಕೆ ತಂದು, ಅದರ ಆಮ್ಲೀಯ ಗುಣವನ್ನು ತಗ್ಗಿಸಲು ಅದರೂಂದಿಗೆ ಸುಣ್ಣವನ್ನು ಸೇರಿಸಿ, ನೀರಿನೂಂದಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಲಾಗುತ್ತದೆ. ಅದನ್ನು ಸಸ್ಯದ ಹಸಿರು ಅಂಗಗಳು ವೇಗವಾಗಿ ಸ್ವೀಕರಿಸುತ್ತವೆ. ಆಮ್ಲೀಯಾವಾದ ಅಥವಾ ಹೆಚ್ಚು ಕ್ಷಾರೀಯವಾದ ದ್ರಾವಣವನ್ನು ಸಿಂಪಡಿಸಿದಾಗ ಹೀರಿಕೊಳ್ಳುವ ಗುಣ ನಿಧಾನವಾಗುತ್ತದೆ. ಇದರಿಂದ ರೋಗಗಳು ಸಮರ್ಪಕವಾಗಿ ಹತೋಟಿಗೆ ಬರುವುದಿಲ್ಲ. ಬೋರ್ಡೊ ದ್ರಾವಣದಲ್ಲಿರುವ ತಾಮ್ರ ಮತ್ತು ಸುಣ್ಣದ ಅಂಶಗಳು ಸಸ್ಯ ಬೆಳವಣಿಗೆಗೆ ಅಗತ್ಯ ಪೋಷಕಾಂಶಗಳಾಗಿರುವ ಕಾರಣ ಅದನ್ನು ಹೀರಿಕೊಳ್ಳುತ್ತವೆ. ಜತೆಗೆ ಎಲೆ, ಕಾಯಿಗಳ ಮೇಲೆ ಲೇಪಿತವಾಗಿ, ಹೀರಿಕೊಳ್ಳುವುದರಿಂದ ಶಿಲೀಂಧ್ರದ ಸೋಂಕು ತಡೆಯಲ್ಪಡುತ್ತದೆ. ಮೇಲ್ಭಾಗದಲ್ಲಿ ಲೇಪಿತವಾದಗಲೂ ಶಿಲೀಂಧ್ರದ ಪ್ರವೇಶಕ್ಕೆ ತಡೆಯಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಬೋರ್ಡೊ ದ್ರಾವಣವನ್ನು ರೈತರು ತಯಾರಿಸಿಕೊಂಡು ಉಪಯೋಗಿಸಿದಲ್ಲಿ ಉತ್ತಮ ರೀತಿಯಲ್ಲಿ ಬೆಳೆಗಳಲ್ಲಿ ಬರುವ ಶಿಲೀಂದ್ಧ ರೋಗಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ
ಬೋರ್ಡೊ ದ್ರಾವಣದ ಅನುಕೂಲಗಳು
* ಈ ದ್ರಾವಣದಿಂದ ತೋಟದ ಬೆಳೆಗಳಲ್ಲಿ ಕಂಡುಬರುವ ಅನೇಕ ಶಿಲೀಂಧ್ರ ರೋಗಗಳನ್ನುಹತೋಟಿ ಮಾಡಬಹುದು.
* ಈ ದ್ರಾವಣವನ್ನು ಸಿಂಪರಣೆ ಮಾಡಿದಾಗ ಸ್ವಾಭಾವಿಕವಾಗಿ ಬೆಳೆಯ ಹೊರ ಮೈಯಲ್ಲಿ ಅಂಟಿಕೊಳ್ಳುವುದರಿಂದ ಸುಮಾರು 30 ರಿಂದ 45 ದಿನಗಳವರೆಗೆ ಬೆಳೆಗೆ ರಕ್ಷ ಣೆ ನೀಡಬಲ್ಲದು.
* ಕಡಿಮೆ ಖರ್ಚಿನಿಂದ ಹೆಚ್ಚು ಪರಿಣಾಮಕಾರಿಯಾದ ಶಿಲೀಂಧ್ರನಾಶಕ ದ್ರಾವಣ ತಯಾರಿಸಿ ಬಳಸಬಹುದು.
* ಸಿಂಪರಣೆ ಮಾಡುವವರ ಆರೋಗ್ಯದ ಮೇಲೆ ಇತರೆ ಶಿಲೀಂಧ್ರನಾಶಕಗಳಿಗೆ ಹೋಲಿಸಿದರೆ ದುಷ್ಪರಿಣಾಮಗಳು ಕಡಿಮೆ.
ಶೇ.1ರ ಬೋರ್ಡೊ ದ್ರಾವಣ ತಯಾರಿಸಲು ಬೇಕಾದ ವಸ್ತುಗಳು
1. ಮೈಲುತುತ್ತ 1 ಕೆ.ಜಿ.
2. ಸುಣ್ಣ 1 ಕೆ.ಜಿ.
3. ನೀರು 100 ಲೀಟರ್
4. ಸ್ವಚ್ಛವಾದ ಕಬ್ಬಿಣದ ತುಂಡು, ಚಾಕು, ಪಿ.ಎಚ್.ಪೇಪರ್
5. 10 ಲೀ. ಸಾಮರ್ಥ್ಯದ 2 ಪ್ಲಾಸ್ಟಿಕ್ ಬಕೆಟ್
6. 100 ಲೀ. ಸಾಮರ್ಥ್ಯದ 1 ಪ್ಲಾಸ್ಟಿಕ್ ಡ್ರಮ್, ಬ್ಯಾರಲ್
ತಯಾರಿಕೆ ವಿಧಾನ :
* ಒಂದು ಕೆ.ಜಿ. ಮೈಲುತುತ್ತವನ್ನು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟಿನಲ್ಲಿ ಸಂಪೂರ್ಣವಾಗಿ ಕರಗಿಸಬೇಕು.
* ಇನ್ನೊಂದು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟ್ನಲ್ಲಿ 1 ಕೆ.ಜಿ. ಸುಣ್ಣವನ್ನು ಸಂಪೂರ್ಣವಾಗಿ ಕರಗಿಸಬೇಕು.
* ಕರಗಿದ 10 ಲೀಟರ್ ಸುಣ್ಣದ ದ್ರಾವಣವನ್ನು 80 ಲೀ. ನೀರಿರುವ 1 ಪ್ಲಾಸ್ಟಿಕ್ ಡ್ರಮ್ಗೆ ಸುರಿಯಬೇಕು. ನಂತರ 10 ಲೀಟರ್ ಮೈಲುತುತ್ತದ ದ್ರಾವಣವನ್ನು ನಿಧಾನವಾಗಿ ಸುರಿದು ಚೆನ್ನಾಗಿ ಕಲಸಬೇಕು. ಈಗ ಈ ಮಿಶ್ರಣವು ಶೇ. 1ರ ಬೋರ್ಡೊ ದ್ರಾವಣವಾಗುತ್ತದೆ. ಇಂತಹ ಮಿಶ್ರಣ ತಿಳಿ ನೀಲಿ ಬಣ್ಣದಾಗಿರುತ್ತದೆ.
ಗಮನಿಸಬೇಕಾದ ಪ್ರಮುಖ ಅಂಶಗಳು
* ಬೋರ್ಡೊ ದ್ರಾವಣ ತಯಾರಿಸಲು ಯಾವಾಗಲೂ ಮಣ್ಣಿನ ಅಥವಾ ಕಟ್ಟಿಗೆ ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಮಾತ್ರ ಉಪಯೋಗಿಸಬೇಕು.
* ಬೋರ್ಡೊ ದ್ರಾವಣವನ್ನು ಬಹಳ ಹೊತ್ತು ಇಟ್ಟಾಗ ತನ್ನ ಪರಿಣಾಮಕಾರಿಯನ್ನು ಕಳೆದುಕೊಳ್ಳುವುದರಿಂದ ದ್ರಾವಣವನ್ನು ತಯಾರಿಸಿದ ಕೂಡಲೇ ಉಪಯೋಗಿಸಬೇಕು. ಒಂದು ವೇಳೆ ಒಂದು ದಿನ ಇಟ್ಟು ಉಪಯೋಗಿಸುವುದಿದ್ದಲ್ಲಿ 250 ಗ್ರಾಂ ಬೆಲ್ಲವನ್ನು 100 ಲೀಟರ್ ದ್ರಾವಣಕ್ಕೆ ಬೆರೆಸಿ ಇಟ್ಟುಕೊಳ್ಳಬಹುದು.
* ಬೋರ್ಡೊ ದ್ರಾವಣಕ್ಕೆ ಯಾವುದೇ ಪೀಡನಾಶಕಗಳನ್ನು ಮಿಶ್ರಣ ಮಾಡಿ ಸಿಂಪರಣೆ ಮಾಡಬಾರದು.
* ಬೋರ್ಡೊ ದ್ರಾವಣವನ್ನು ಬಟ್ಟೆಯಲ್ಲಿ ಅಥವಾ ಸಣ್ಣ ಕಣ್ಣಿನ ಜರಡಿಯಲ್ಲಿ ಶೋಧಿಸಿ ಉಪಯೋಗಿಸಬೇಕು.
* ಹೆಚ್ಚು ಸುಣ್ಣ ಸೇರಿಸಿದರೆ ದ್ರಾವಣ ಕ್ಷಾರೀಯ ಗುಣ ಹೊಂದಿ ರಸಸಾರ 7ಕ್ಕಿಂತ ಹೆಚ್ಚಾಗುವುದು ಹಾಗು ತಾಮ್ರದ ಮುಕ್ತ ವಿದ್ಯುದ್ವಾಹಿ ಕಣಗಳು ಕಡಿಮೆಯಾಗಿ ಶಿಲೀಂಧ್ರನಾಶಕದ ಗುಣ ಕಡಿಮೆಯಾಗುತ್ತದೆ.
* ಬೋರ್ಡೊ ದ್ರಾವಣಕ್ಕೆ ಆಮ್ಲೀಯತೆ ಇರಬಾರದು.
* ಶುದ್ಧ ಸುಟ್ಟ ಸುಣ್ಣ ಅಥವಾ ಸ್ಪ್ರೇ ಸುಣ್ಣವನ್ನು ಉಪಯೋಗಿಸಬೇಕು.
* ಸಿಂಪರಣೆ ದ್ರಾವಣವನ್ನು ಆಗಾಗೆ ಚೆನ್ನಾಗಿ ಕಲಕಿ ಬಳಸಬೇಕು.
ಪ್ರಮುಖ ಬೆಳಗೆಗಳ ರೋಗ ನಿಯಂತ್ರಣಕ್ಕೆ ಬಳಕೆ
ಬೆಳೆಗಳು - ಪ್ರಮುಖ ರೋಗಗಳು
ಅಡಿಕೆ - ಕೊಳೆರೋಗ, ಸುಳಿಕೊಳೆರೋಗ
ತೆಂಗು - ಸುಳಿಕೊಳೆರೋಗ, ಕಾಂಡದಿಂದ ರಸಸೋರುವ ರೋಗ
ಕಾಳು ಮೆಣಸು - ಶೀಘ್ರ ಸೊರಗುರೋಗ, ಚಿಬ್ಬು ರೋಗ (ಕೊತ್ತು ಉದುರುವುದು)
ಶುಂಠಿ - ಗೆಡ್ಡೆ ಕೊಳೆರೋಗ, ಎಲೆ ಚುಕ್ಕೆರೋಗ.
ಕಾಮೆಂಟ್ ಮಾಡಿ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ